ಮನಸು ಮನಸುಗಳ ಪಿಸುಮಾತು

Tuesday, July 24, 2012

ಸ್ವಾತಿ ಮಳೆಯಾದೋನಿಗೆ




ಮನದುಂಬಿದ ಗೆಳೆಯನಿಗೆ

    ಬಹುದಿನಗಳ ನಂತರ ಸತ್ತ ಬರವಣಿಗೆಯ ಪರಿಯನ್ನು ಚೇತನಗೊಳಿಸಲು ಒಂದು ಸುದಿನ. ಇದನ್ನು ಹಾಗೆಯೇ ಹೇಳಿದರೆ ಚೆಂದ ಅನ್ನಿಸುತ್ತದೆ. ಬಿರುಕಿನ ಬೆಂಗಾಡಿನ ನೆಲದಲ್ಲಿ ಬೀಳುವ ಸಣ್ಣ ಮಳೆಯ ಹನಿಗಳಿಗೆ ಎಲ್ಲೋ ಒಂದು ಗರಿಕೆ ಟಿಸಿಲೊಡೆಯುತ್ತಲ್ಲಾ ಹಾಗೆ? ಕೆಲವು ಘಟನೆಗಳು ಘಟಿಸುವ ಪರಿಯೆ ಅಂತಹದ್ದು....! ಬದುಕಿನ ಯಾನದಲ್ಲಿ ನಾವು ಹೊರುವ ಮೂಟೆಯಲ್ಲಿ ಎಲ್ಲವೂ ಸೇರತೊಡಗುತ್ತವೆ. ಕೆಲವು ಗತಿಸಿದ ನೆನಪುಗಳು  ಕಣ್ಣೀರಾಗಿ ಬದುಕು ಬೆಂಗಾಡು ಎನಿಸಿದರೆ ಮತ್ತೆ ಕೆಲವು ವೇದನೆಗೆ ಸಾಂತ್ವನ ನೀಡುವ ಸ್ವಾತಿ ಮಳೆಯಾಗುತ್ತವೆ. ಯಾವುದು ಏನೇ ಆದರೂ ಎಲ್ಲವನ್ನು ಹೊರುವ ನಾವು ಸಮತೋಲನವನ್ನು ಕಾಯ್ದುಕೊಳ್ಳಬೇಕು ಅಷ್ಟೇ....

    ಎಲ್ಲವನ್ನು ಕಳೆದುಕೊಂಡು ಪ್ರಪಂಚದೆದುರು ದೀನರಾಗಿ ನಿಂತುಬಿಡುತ್ತೇವಲ್ಲಾ..? ಎಲ್ಲವೂ ಬದುಕಿನಲ್ಲಿ ಕಳೆಯಿತು ಅಂದುಕೊಳ್ಳುವಷ್ಟರಲ್ಲೇ ಹುಟ್ಟುವ ಒಂದು ಸಣ್ಣ ಚಿಲುಮೆ ಪುನಃ ಬದುಕನ್ನು ಚಿಗುರಿಸುವ ಯತ್ನ ಮಾಡುತ್ತದಲ್ಲ ಅದನ್ನು ಏನೆಂದು ಕರೆಯಬಹುದು? ಜೀವನವಾ? ಹೊಂದಾಣಿಕೆಯಾ? ಇಲ್ಲಾ ರಾಜಿಯಾ? ಆಗುವ ಸಣ್ಣ ಅವಘಡಗಳಿಗೆ, ನಿರಾಸೆಗಳಿಗೆ, ಅವಮಾನಗಳಿಗೆ ತಲೆಕೊಟ್ಟು ಪ್ರಾಣ ಕಳೆದುಕೊಳ್ಳುವಂತಿದ್ದರೆ ಪ್ರಪಂಚ ಇವತ್ತು ಈ ಪರಿ ಇರ್ತಾ ಇರ್ಲಿಲ್ಲಾ ಅನ್ನಿಸುತ್ತೆ... ದುರಂತಗಳ ಸರಮಾಲೆಯ ಮೇಲೆ ಬದುಕೋದು, ಅದರ ಸಮಾಧಿಯ ಮೇಲೆ ಬದುಕು ಕಟ್ಟಿಕೊಳ್ಳೋದು ಮನುಷ್ಯನ ಸಹಜಗುಣವೇ..ನೆನಪಿನ ಹುತ್ತದಲ್ಲಿ ಸಾಕಷ್ಟು ನೋವಿದ್ದರೂ ಅದನ್ನು ಎಲ್ಲಿಯೂ ಅನಾವರಣಗೊಳಿಸದೆ ಚಿಗುರುವ ಕನಸುಗಳನ್ನು ಪೋಷಿಸುವ ಅವುಗಳನ್ನು ನನಸಾನ್ನಾಗಿಸುವಲ್ಲಿ ಮಾಡುವ ಪ್ರಯತ್ನವನ್ನೇ ಹೋರಾಟವೆನ್ನಬಹುದು...

    ನಮ್ಮ ಜೀವನವೆ ಒಂದು ನದಿಯಿದ್ದಂತೆ..! ಪೂರ್ತಿಯಾಗಿ ಎಲ್ಲೂ ಸಮತಟ್ಟಾಗಿರುವುದಿಲ್ಲಾ... ಎಲ್ಲೋ ಆಳ, ಸಣ್ಣ ಸುಳಿಗಳು, ಭೋರ್ಗರೆತ, ಆಗಾಗ ಪ್ರಶಾಂತವಾಗುವುದು, ಹರಿಯುವ ದಾರಿಯೆಲ್ಲೆಲ್ಲಾ ಹೊಸ ಹೊಸದನ್ನು ಮೈಗೂಡಿಸಿಕೊಂಡು ತನ್ನ ಪರಿಧಿಯನ್ನು ಹೆಚ್ಚಿಸಿಕೊಂಡು ಹೋಗುತ್ತದೆ. ಹಾಗೆಯೇ ಕೆಲವು ಅಲ್ಲಿಯೇ ಕವಲೊಡೆದು ತನ್ನ ದಾರಿಯನ್ನು ನೋಡಿಕೊಳ್ಳುತ್ತದೆ. ಹಾಗೆಂದ ಮಾತ್ರಕ್ಕೆ ಅದರ ತೀವ್ರತೆಯ ಹಂತವು ನಿಂತುಬಿಡುವುದಿಲ್ಲ ಏಕೆಂದರೆ ಈ ನದಿಗೆ ಆಗಾಗ ಹುಚ್ಚು ಪ್ರವಾಹ ಬರುತ್ತಲೇ ಇರುತ್ತದೆ. ಹೀಗಿದ್ದರೂ ಅವನ್ನೆಲ್ಲಾ ಜೀರ್ಣಿಸಿಕೊಂಡು ನದಿ ಮತ್ತೆ ಹರಿಯುತ್ತಲೇ ಹೋಗುತ್ತದೆ..

    ಅಂತೆಯೇ ನಿನ್ನ ಒಡನಾಟದಲ್ಲಿ ಕಳೆದ ಕೆಲವು ಕ್ಷಣಗಳು ಅವಿಸ್ಮರಣೀಯ, ಅವರ್ಣನೀಯ ಅದು ಸಂವೇದನೆಗಷ್ಟೇ ತಾಗಬೇಕು ನಿಲುಕಬೇಕು. ಆಗಾಗ ನೆನಪಾಗಿ ಕಾಡಿಸುವುದು ಹತ್ತಿದ ಬೆಟ್ಟ, ಸವೆಸಿದ ಮೆಟ್ಟಿಲು, ಬರಹದ ವಿಮರ್ಶೆ, ಒಂದಷ್ಟು ನಗು, ಮಾತು, ಮೌನ, ಸಂಜೆಯ ವೇಳೆಗೆ ಭಾದಿಸಿದ ಕಾಲುನೋವು  ಇವು ಬಹಳ ಅಪ್ಯಾಯವಾನ ಇದನ್ನೆಲ್ಲಾ ಹೇಳಲು ಕಾರಣನಾದವನು ನೀನು, ನಿನ್ನ ಜನುಮದಿನ ನಿಜಕ್ಕೂ ಅವೆಲ್ಲಾ ಸಂಭ್ರಮದ ಮಧುರ ಕ್ಷಣಗಳವು. ಕಣ್ಣಂಚಿನ ಕನಸುಗಳಿಗೆ ಚಿತ್ತಾರವನ್ನು ತುಂಬಿದವು ಇಂತಹ ಘಳಿಗೆಗಳು ಆಗಾಗ ಬರುತ್ತಿರಲಿ ಚಿಗುರಿದ ಸ್ನೇಹ ಅಣಬೆಯಂತಾಗದೆ ನೂರಾರು ಬಿಳಿಲು ಬಿಡುವ ಆಲದ ಮರದಂತಾಗಲಿ ಎನ್ನುವುದಷ್ಟೇ ನನ್ನ ಅನಿಸಿಕೆ.... ಏನಂತೀಯಾ....?


                                                                                                                       ನಿನ್ನ ಆತ್ಮೀಯಳು.

Wednesday, December 21, 2011

ಅವ ನನ್ನವ ....

ಅವ ನನ್ನವ
ಹೃದಯ ಪರಿಧಿಯ
ಎಲ್ಲ ಎಲ್ಲೆಗಳನ್ನು
ದಾಟಿದವ...


ಒಂಟಿತನದ ಗಡಿಗೆಯನ್ನೊಡೆದು
ಹೃದಯ ಮಂದಿರದಲ್ಲೊಂದು
ಗುಡಿಯನ್ನು ಕಟ್ಟಿದವ...

ನೆನಪಾದಗಲೆಲ್ಲ ನವಿರಾಗಿ ಕಂಪಿಸುವ
ಹೃದಯದ ಬಡಿತದ ತಾಳ
ತಪ್ಪದಂತೆ ಕಣ್ಣಿಟ್ಟು ಕಾಯ್ದವ...


ಕನಸ್ಸಿನಲ್ಲಿ
ಸಣ್ಣಗೆ ನಡುಗಿದಾಗಲೆಲ್ಲಾ
ಬಿಸಿಯುಸಿರನೀಯುತ್ತಾ
ಬೆಚ್ಚಗೆ ಸಲಹಿದವ...


ಹೃದಯದಲ್ಲಿ ಅಡಗಿದವನಿಗೊಮ್ಮೆ
ಸಾವಿರ ಬಾರಿ ಕೂಗಿ
ಹೇಳುತ್ತದೆ ನನ್ನ ಹೃದಯ
ಅವ ನನ್ನವ...ಅವ ನನ್ನವ....

Sunday, September 4, 2011

ನಿಂತ ನೀರ ಕದಡಬೇಡಿ ಕಲ್ಲುಗಳೆ......




ಯಾಕೋ ಮನಸ್ಸು ಇದ್ದಕ್ಕಿದ್ದ ಹಾಗೆ ತಳಮಳಿಸುತ್ತೆ, ಎಲ್ಲವೂ ಖಾಲಿ... ಶೂನ್ಯವಾಯ್ತೆನೋ ಅನ್ನಿಸುತ್ತೆ. ಖಾಲಿಯಾದ ಮನಸ್ಸಿನ ಮೈದಾನದಲ್ಲಿ ಸರಿದ ಹೆಜ್ಜೆಯ ಗುರುತನ್ನು ಹುಡುಕುವ ಹುನ್ನಾರ, ಸಿಕ್ಕ ಎಳೆಯನ್ನು ಅನುಸರಿಸಿ.. ಹೋದವರು ಸಿಕ್ಕಾರೆಂಬ ಆಸೆ.... ಸಂಭ್ರಮಿಸಿದ ದಿನಗಳನ್ನೊಮ್ಮೆ ನೆನೆದು ಅವೆಲ್ಲಾ ಹಿಂತಿರುಗಿ ಬಂದಾವೆಂಬ ಭಾವ, ಆಸೆಯ ಮರೀಚಿಕೆಯನ್ನು ಬೆಂಬೆತ್ತಿ ಹೋಗಿ ನಿರಾಸೆಯನ್ನು ಅನುಭವಿಸಿ ನರಳುವುದೂ ಒಂದು ಸುಖವೇ? ಮನುಷ್ಯನನ್ನು ಭರವಸೆಗಳು ಆಶಾವಾದಿಯನ್ನಾಗಿಸುತ್ತವೆ ಅನ್ನುವುದಾದರೆ ಸೋತ ಪ್ರೀತಿಯಲ್ಲಿ ಯಾಕೆ ಆಗೋಲ್ಲ?

ಇಲ್ಲಿ ಗತಕಾಲದ ಎಲ್ಲ ವೈಭವ, ನೆನಹುಗಳಿವೆ... ಚಹಾ ಕುಡಿದ ಪೆಟ್ಟಿಗೆ ಅಂಗಡಿ, ಹುಯ್ಯವ ಮಳೆಗೆ ಆಶ್ರಯ ಪಡೆದ ಮರ, ಮಲ್ಲೆ ಹೂ ಮಾರುವ ಅಜ್ಜಿ , ಕೈ ಕೈ ಹಿಡಿದು ಓಡಾಡಿದ ಕ್ಯಾಂಪಸ್ ಎಲ್ಲವೂ ಇಲ್ಲಿ ಜೀವಂತ... ನಿನ್ನನ್ನು ಉಳಿದು.... ನನ್ನ ಸೋತ ಪ್ರೀತಿಯನ್ನುಳಿದು....ನೀ ಇಲ್ಲದ ಕೊರತೆಯನ್ನು ಅವು ಆಗಾಗ ಭಾದಿಸುತ್ತವೆ , ಮರೆಯಲಾರದಷ್ಟು... ತಡೆಯಲಾರದಷ್ಟು....

ಪ್ರೀತಿಗೆ ಎಲ್ಲವನ್ನು ಮರೆಸುವ ಶಕ್ತಿಯಿದೆ ಆದರೆ ಸೋತ ಕಳೆದುಕೊಂಡ ಪ್ರೀತಿಗೆ ಏನನ್ನೂ ಮರೆಯುವ ಶಕ್ತಿಯಿಲ್ಲ.. ನಿರಾಸೆಗೊಂಡ ಮನ , ಹೃದಯ ತಂತಾನೇ ಎಲ್ಲೋ ಶಮನವಾಗುವ ವೇಳೆಯಲ್ಲೇ ತಿರುಗಿದ ದಾರಿ , ಮಲ್ಲೆ ಪರಿಮಳ , ಮಳೆ, ಇಬ್ಬನಿ , ಕೊನೆಗೆ ಕಿತ್ತು ಹೋದ ಚಪ್ಪಲಿಯೂ ಸಹ.... ಅದಕ್ಕೆ ಪಿನ್ನು ಹಾಕಿ ಬಾ ಎಂದು ಮೆಲ್ಲ ಕೈ ಹಿಡಿದು ನಡೆಸಿದ್ದನ್ನ ನೆನೆ ನೆನೆದು ಮನಸ್ಸನ್ನು ನೋಯಿಸಿಕೊಂಡಿಲ್ಲವಾ...? ಎಲ್ಲಾ ಸಂಗತಿಯೂ ನಿನ್ನ ನೆನಪನ್ನೇ ತರುವುದಾದರೆ ನಿನ್ನ ನೆನಪಿಂದ ಹೊರ ಬರುವುದಾದರೂ ಹೇಗೆ...?

ಇಂದು ನನ್ನ ಮನ ಹರಿಯುವ ನೀರಲ್ಲ.. ಕಹಿ ನೆನಪಿನ ನೋವಿನ ಬಗ್ಗಡವನ್ನು ಒಡಲಿನಲ್ಲಿ ಅಡಗಿಸಿ ಮೇಲೆ ತಿಳಿಯಾಗಿ ತೋರುವ ನೀರು.... ನೆನೆಪೆಂಬ ಕಲ್ಲುಗಳು ಆಗಾಗ ನಿಂತ ನೀರನ್ನು ಕದಡುವುದು ಬೇಡ... ಬಗ್ಗಡ ನನ್ನ ಒಡಲಿನಲ್ಲೇ ಇರಲಿ.... ನೆನಪುಗಳು ಆಗಾಗ ನನ್ನೆದೆಯ ಮೀಟುವ ಭರ್ಜಿಗಳಾಗದಿರಲಿ...ಅವು ನಿಂತ ನೀರ ಕದಡುವ ಕಲ್ಲುಗಳಾಗದಿರಲಿ....



ಅಂತರ್ಮುಖಿ.

Tuesday, August 30, 2011

ನೀ ಬರುವ ದಿನವೇ ನನಗೆ ನವರಾತ್ರಿಯ ಉತ್ಸವ.....




ಅಂತೂ ಈ ಬಾರಿಯೂ ನಿನ್ನಿಂದ ನನಗೆ ನಿರಾಸೆಯಾ? ಗೌರಿ ಹಬ್ಬಕ್ಕೆ ಬರ್ತೀನಿ ಅಂತ ಹೇಳಿ ಹೋದವನು ನೀನು!.. ನೀ ಹೋಗುವಾಗ ಸೀರೆ ಕೊಡಿಸಿ ಹಬ್ಬಕ್ಕೆ ಉಟ್ಟುಕೊ ಬರುವಾಗ ಜೊತೆಯಲ್ಲಿ ಬಳೆಗಳನ್ನು ತರ್ತೀನಿ ಅಂದವನು ಈ ಸಾರಿಯೂ ಬರಲಿಲ್ಲ.. ಬಳೆಗಳನ್ನು ಕಳುಹಿಸಿದ್ದೀನಿ ಹಾಕೋ ಅಂತೀಯಲ್ಲ ಇದು ಯಾವ ನ್ಯಾಯ? ನೀನೆ ಇಲ್ಲಿ ಇಲ್ಲ ಅಂದ ಮೇಲೆ ಯಾರನ್ನ ನಾನು ಮೆಚ್ಚಿಸಬೇಕು? ಪ್ರತಿ ಸಾರಿಯೂ ನಿನ್ನ ಆಗಮನಕ್ಕೆ ಕನಸು ಕಂಗಳಿಂದ ಕಾಯುವ ಕೆಲಸ ನನ್ನದು..ನೀ ಕೊಡಿಸಿದ ಸೀರೆ, ಬಳೆಗಳು, ಮುಡಿ ತುಂಬಾ ಮೊಲ್ಲೆಯೊಂದಿಗೆ ನಿನ್ನ ಮುಂದೆ ನಿಲ್ಲಬೇಕು ಅನ್ನೋ ಆಸೆ ನನ್ನದು.. ನೋಡುವ ಕಂಗಳು ನಿನ್ನದಾಗಬೇಕು ಅನ್ನುವ ಸ್ವಾರ್ಥ ನನ್ನದು.


ಸೀರೆಯನ್ನು ನೋಡಿದಾಗಲೆಲ್ಲಾ ನೀನು ನನ್ನೊಂದಿಗೆ ಇರುವಷ್ಟೇ ಆನಂದ , ಆ ಬಳೆಗಳು ಅಷ್ಟೇ ಸುಂದರವಾಗಿವೆ, ನೀನೆ ಬರುವುದಿಲ್ಲ ಅಮ್ದ ಮೇಲೆ ನನಗೆ ಅವುಗಳನ್ನು ತೊಡಬೇಕು ಅನ್ನಿಸುತ್ತಿಲ್ಲ.. ನೀನು ಎಂದು ಇಲ್ಲಿಗೆ ಬರುತ್ತೀಯೋ ಅಂದೇ ನನಗೆ ಹಬ್ಬ, ನವರಾತ್ರಿಯ ಉತ್ಸವ... ತಡಮಾಡದೆ ಬೇಗ ಬಾ.... ಬರುವಾಗ ಗೊತ್ತಲ್ಲ ಏನು ತರಬೇಕು ಅಂತ ..... ಒಂದಿಷ್ಟು ಮಲ್ಲೆ ಜೊತೆಗೆ ಸಿಂಧೂರ... ನಿನಗಾಗಿ ಕಾಯ್ತಾ ಇರ್ತೀನಿ....


ನಿನ್ನ
ಕನಸು ಕಂಗಳ ಹುಡುಗಿ




Saturday, February 12, 2011

ನನ್ನ ಮುದ್ದಿನ ಕಾಗೆ ಬಂಗಾರಕ್ಕೊಂದು ಪ್ರೇಮ ಪತ್ರ. . .

ನಿನ್ನ ಹೀಗೆ ಕರೆದರೆ ನಿನಗೆ ತುಂಬಾ ಕೋಪ ಬರುತ್ತೆ ಅಂತ ನಂಗೆ ಗೊತ್ತು. ಅದರೂ ತುಸು ಕಪ್ಪಗಿರೋ ನಿನ್ನ ಕಾಗೆ ಬಂಗಾರ ಅಂತ ಕರೆದೂ ನಿನ್ನ ಆಗಾಗ ರೇಗಿಸ್ತಾ ಇರಬೇಕು ಅನ್ನೋ ಆಸೆ. ಕೊಂಚ ಡಿಫರೆಂಟ್ ಅಲ್ವಾ ನಿನ್ನ ಹೆಸರು ಬಹುಶಃ ಯಾರು ಹೀಗೆ ಕರೆದಿರೊಲ್ಲ ಅಲ್ವಾ ? ನೀನಂತೂ ಜವಾಬ್ದಾರಿ, ಲೈಫ್ ನಲ್ಲಿ ಸೆಟ್ಲ್ ಆಗಬೇಕು ಅಂತ ದೂರದಲ್ಲಿ ಎಲ್ಲೋ ಒಂದು ಕಡೆ ಕೂತ್ಕೊಂಡಿದೀಯ ಆದರೆ ನನಗೆ ನಿನ್ನಷ್ಟು ಸಹನೆಯಂತೂ ಇಲ್ಲಪ್ಪ ನಾನೊಬ್ಬಳು ನಿನಗೋಸ್ಕರ ಇದೀನಿ ಅಂತ ನಾನು ನಿನಗೆ ನೆನಪಿಸಬೇಕಾಗಿದೆ ನೋಡು ನನ್ನಂಥ ನತದೃಷ್ಟ ಪ್ರೇಮಿ ಮತ್ತೊಬ್ಬಳಿಲ್ಲ ಅಂತ ಅನ್ನಿಸುತ್ತೆ.


ನಿನಗೆ ನೆನಪಿದೆಯಾ? ಕಳೆದ ವರ್ಷ ಪ್ರೇಮಿಗಳ ದಿನದಂದು ಮಲ್ಲಿಗೆ ಹೂವು ಕೊಟ್ಟು ನೀನು ನನ್ನ ಪ್ರಪೋಸ್ ಮಾಡಿದ ದಿನ ಇಂದಿಗೆ ಒಂದು ವರ್ಷ! ಆದರೆ ಬಾರಿ ನೀನೆ ನಾಪತ್ತೆ. ಇಲ್ಲಿ ಎಲ್ಲ ಪ್ರೇಮಿಗಳು ದಿನಕ್ಕೆ ಎಲ್ಲಿ ಹೋಗಬೇಕು , ಏನು ಗಿಫ್ಟ್ ಕೊಡಬೇಕು ಅನ್ನುವ ಖುಷಿಯಲ್ಲಿ ಇದ್ದರೆ ನಾನು ಮಾತ್ರ ನೀನು ಬರುವ ನೀರಿಕ್ಷೆಯಲ್ಲಿಯೇ ಕಾಲ ಕಳೆಯಬೇಕಿದೆ. ಒಂದು ತಿಂಗಳಿಂದ ಒಂದು ಫೋನ್ ಕರೆ ಕೂಡ ಇಲ್ಲ. ಅದಕ್ಕೆ ಬಾರಿ ನಿನಗೆ ಒಂದು ಪತ್ರ ಕಳುಹಿಸಿದೀನಿ. ನೋಡಿದ ಮೇಲೆ ನಿರಾಸೆ ಮಾಡಬೇಡ ಅದರಲ್ಲಿ ನನ್ನದೊಂದು ಒತ್ತಾಸೆಯಿದೆ. ಬಾರಿಯ ಪ್ರೇಮಿಗಳ ದಿನದಂದು ಅಪೂರ್ವ ಉಡುಗೊರೆಯೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಕಾಯುತ್ತಾ ಇರುತ್ತೇನೆ.ನಿನ್ನ ಕೈ ಹಿಡಿದು ಸಾವಿರದ ಮೆಟ್ಟಿಲುಗಳನ್ನು ನಿನ್ನೊಂದಿಗೆ ಹತ್ತುವಾಸೆ. ಇಷ್ಟು ದಿನದ ವಿರಹ ವೇದನೆಗೆ ಪ್ರೇಮಿಗಳ ದಿನದಂದು ಒಂದು ಬ್ರೇಕ್ ಕೊಡ್ಲಿ ಅಲ್ವಾ? ಬರುವಾಗ ಮಲ್ಲೆ ಹೂ ಮರೆಯದಿರು ಅದೇ ಅಂದು ನೀನು ನನಗೆ ಕೊಡುವ ಒಲವಿನ ಕಾಣಿಕೆ! ನಿರಾಸೆಗೊಳಿಸಬೇಡ ನನ್ನ ಮುದ್ದಿನ ಕಾಗೆ ಬಂಗಾರ ಬರ್ತೀಯಾ ಅಲ್ವಾ?


ನಿನ್ನ ಕನಸು ಕಂಗಳ ಹುಡುಗಿ

Wednesday, January 12, 2011

ಸಂಬಂಧಗಳೆಂಬ ಮಿಸ್ಸಿಂಗ್ ಲಿಂಕ್ ನಲ್ಲಿ ಎಲ್ಲೋ ಹುಟ್ಟಿದ ನಾನು.... ಎಲ್ಲೋ ಬೆಳೆದ ನೀನು....



ಕೆಲವು ಸಂಗತಿಗಳೇ ಹೀಗೆ ಅನ್ನಿಸುತ್ತೆ! ಎಂದೋ ಎಲ್ಲೋ ಪಡೆದಂತವುಗಳು, ಕಳೆದು ಹೋದ ಅಂಶಗಳು ಆಗಾಗ ದುತ್ತೆಂದು ಎದುರು ನಿಲ್ಲಲಾರಂಭಿಸುತ್ತವೆ. ಯಾವುದೋ ಘಳಿಗೆಯಲ್ಲಿ ಸನ್ನಿವೇಶದಲ್ಲಿ ಬೆಸುಗೆಯಾದ ಸಂಬಂಧಗಳಿಗೆ ಇಷ್ಟೊಂದು ಅರ್ಥವಿದೆಯಾ? ಅನ್ನಿಸಲಾರಂಭಿಸುತ್ತದೆ. ಅವು ನಿತ್ಯಜೀವನದ ಆಗುಹೋಗುಗಳಲ್ಲಿ ತುಂಬಿಕೊಳ್ಳುವಷ್ಟು? ಮನದ ತುಮುಲವನ್ನೆಲ್ಲಾ ಹಂಚಿಕೊಳ್ಳುವಷ್ಟು? ಅಂತಹ ಸಂಬಂಧಗಳು ಹುಟ್ಟುವ ಪರಿಯೆ ಅಂತಹುದು. ಎಂದೋ ಮಾಡಿದ ಒಂದು ಮೆಚ್ಚುಗೆಯ ಇ-ಮೇಲ್ , ಕಳುಹಿಸಿದ ಸ್ನೇಹ ಸಂದೇಶಕ್ಕೆ ಒಂದು ಮಾರುತ್ತರ. ಇವು ಮರೆಯಲಾಗದ ಬಿಡಿಸಲಾಗದ ಒಂದು ಬಂಧಕ್ಕೆ ಬೆಸುಗೆಯನ್ನು ಹಾಕುತ್ತವೆ ಅಂದರೆ ನಿಜವಾಗಿಯೂ ನಂಬಲು ಅಸಾದ್ಯವಾದುದು.

ಹೀಗೆ ಹುಟ್ಟಿದ ಅನೀರಿಕ್ಷಿತ ಸಂಬಂಧಗಳು ಇಡೀ ಜೀವನದಲ್ಲಿ ತುಂಬಿಹೋಗುವಷ್ಟು ಪ್ರಮುಖ ಸ್ಥಾನವನ್ನು ಪಡೆಯಲಾರಂಭಿಸುತ್ತವೆ.ಎಲ್ಲೋ ಕಾಣದ ಮುಖವೊಂದು ಸಮಸ್ಯೆಗಳಿಗೂ ಸಂತಸಗಳಿಗೂ ಸಾಂತ್ವನ ಹೇಳುವ,ನೊಂದಾಗ ಕಾಳಜಿ ತೋರುವ ಜವಾಬ್ದಾರಿಯನ್ನು ಹೊರಲಾರಂಭಿಸುತ್ತದೆ. ಇಂದಿನ ಧಾವಂತದ ಜೀವನದಲ್ಲಿ ಸಮಸ್ಯೆಯನ್ನು ಹಂಚಿಕೊಳ್ಳುವುದಿರಲಿ ಕೇಳುವ ಕನಿಷ್ಟ ಸಹನೆಯನ್ನು ಸಹ ಉಳಿಸಿಕೊಂಡಿರುವುದಿಲ್ಲ. ಯಾವುದೇ ಸಮಯದಲ್ಲಿಯೂ ಹೇಳಿದಷ್ಟನ್ನೂ ಸಹನೆಯಿಂದ ಕೇಳುವ ಹೃದಯವಂತಿಕೆ ಇದೆಯಲ್ಲಾ ಅದು ಎಷ್ಟು ಮಂದಿಗೆ ಇರಲು ಸಾಧ್ಯ? ಅಂತಹ ಸಂಬಂಧಗಳು ಬಹಳ ಮೌಲ್ಯಾಧಾರಿತವೆನಿಸುತ್ತವೆ.

ಅವುಗಳ ವ್ಯಾಪ್ತಿಯೆ ಅಂತಹುದ್ದು, ಒಂದು ವಿಷಾದದ ಛಾಯೆಯನ್ನು ಮುಳುಗಿಸಿ ಬಿಡುವಂತಹ ಅಮೃತಬಿಂದು.... ಒಂದು ನೋವನ್ನು ನಲಿವಾಗಿ ಪರಿವರ್ತಿಸಬಲ್ಲ ಮಿಂಚು... ತುಂಬು ಪ್ರೀತಿಯನ್ನು ಸರ್ವರಲ್ಲೂ ಹಂಚುವ ಉದಾರತೆ, ಕರಟಿದ ಬಳ್ಳಿಗೂ ಚಿಗುರುವ ಆಸೆ ತುಂಬುವ ಮನೋಭಾವ...

ರಕ್ತ ಹಂಚ್ಕೂಂಡು ಹುಟ್ಟಿಲ್ಲ ಕೈ ಕೈ ಹಿಡಿದು ಆಡ್ಲಿಲ್ಲ ಸೀಬೆ ಮಾವು ಹಂಚಿ ತಿನ್ಲಿಲ್ಲ.. ಮನೆ ದಾರಿಗಳು ದೂರ ದೂರ... ಆದರೂ ನಾವು ಹತ್ತಿರ. ಇದು ಮನಸುಗಳ ನಡುವಿನಲ್ಲಿ ಕತ್ತರಿಸಲಾಗದ ಸರಪಳಿ... ಈ ಸರಪಳಿಯ ಬಿಡಿಸಲಾಗದ ಬೆಸುಗೆಗೆ ನಾವು ಕೊಡಬೇಕಾದ್ದು ಇಷ್ಟೆ. ನೆನಪಾದಾಗೊಮ್ಮೆ ಪ್ರೀತಿಯಿಂದ ಕಳುಹಿಸುವ ಒಂದು ಎಸ್ಸೆಮ್ಮೆಸ್, ಒಂದು ಇ-ಮೇಲ್ ಎಂದೋ ಒಂದು ಭೇಟಿ... ಇಂತಹ ಸಂಬಂಧಗಳು ಮುಗ್ಧ ಮಗುವಿನ ರೂಪದಲ್ಲಿ ಅಳಿಯದ ಪ್ರಕೃತಿ ಕೊಡುಗೆ ರೂಪದಲ್ಲಿ ಮನುಷ್ಯ ಸಂಬಂಧಗಳ ಅಡಿಯಲ್ಲಿ, ಹಾಗೆಯೇ ನನ್ನ- ನಿನ್ನ ಒಡನಾಟದಲ್ಲಿ ಎಲ್ಲೋ ಬೆಳೆದ ನಾನು, ಎಲ್ಲೋ ಹುಟ್ಟಿದ ನೀನು......

" ದುಡುಕಿದಾಗ ತಿಳಿ ಹೇಳಿದ, ಅತ್ತಾಗ ಸಾಂತ್ವನ ಹೇಳಿದ ಪ್ರೀತಿಯಿಂದ ಗೂಬೆ ಎಂದು ಕರೆದ ನನ್ನ ಆತ್ಮೀಯರಿಗೆ ಈ ಪತ್ರ ಸಲ್ಲಬೇಕು.

Friday, April 23, 2010

ಕಣ್ಣಂಚಿನ ಕನಸುಗಳಿಗೆ ರಂಗು ತುಂಬುವ ಆ ದಿನ.........

ಚಿನ್ನೂ ಅಂತೂ ನಾವು ಅಂದುಕೊಂಡ ದಿನ ಬಂದೇ ಬಿಡ್ತು. ಕಳೆದ ೯ ತಿಂಗಳಿನಿಂದಲೂ ಕಂಗಳಲ್ಲಿ ನಿನ್ನ ಕಾಣುವ ಕನಸಿನ ಚಿತ್ತಾರ ಹೊತ್ತವಳಿಗೆ ಅವಕ್ಕೆಲ್ಲಾ ರಂಗು ತುಂಬುವ ಆ ಸುಂದರ ಘಳಿಗೆ. ನಾನು ಒಬ್ಬರನೊಬ್ಬರು ನೋಡುವ ಆ ಸುಂದರ ಕ್ಷಣ ನಿಜಕ್ಕೂ ರೋಮಾಂಚನವೆನಿಸುತ್ತದೆ. ಎದೆಯಲ್ಲಿ ಆಡದೆ ಉಳಿದ ಮಾತುಗಳೆಲ್ಲಾ ಒಂದೇ ಬಾರಿಗೆ ಹೊರಹೊಮ್ಮುವ ಆ ದಿನ ನಿಜವಾಗಿಯೂ ಅವಿಸ್ಮರಣೀಯ! ಭಾವನೆಗಳ ಮಹಾಪೂರದಲ್ಲಿ ನಾವಿಬ್ಬರೂ ತೋಯುವ ಆ ಘಳಿಗೆ ಎಂದೂ ಮಾಸದ ನೆನಪು.

ಮಳೆರಾಯನ ಆಗಮನಕ್ಕೆ ಚೆನ್ನಾಗಿ ಕಾದು ನಿಂತು ನೆಲದ ಮೇಲೆ ಬಿದ್ದ ಹನಿಗಳಿಗೆ ಕಂಪು ಸೂಸುವ ವಸುಂಧರೆಯಂತೆ, ಪರಾಗ ಸ್ಪರ್ಶಕ್ಕೆ ಕಾದು ಕುಳಿತ ಸುಮದಂತೆ, ನಿನ್ನ ಎದೆ ಗೂಡಿನಲ್ಲಿ ಬೆಚ್ಚಗಿರುವ ಆಸೆ ಹೊತ್ತು ಕಾದು ಕುಳಿತವಳಿಗೆ ಕನಸು ನನಸಾಗುವ ಕಾಲವಿದು. ಪ್ರೀತಿ ಹುಟ್ಟುವುದು ಸುಕೋಮಲವಾದ ಹೃದಯದಲ್ಲಿ ಮಾತ್ರ. ಆಗ ಮಾತ್ರ ಮನಸ್ಸುಗಳು ಒಂದಾಗಿರಲು ಸಾಧ್ಯ ಇದು ಎಂದೂ ಪ್ರೀತಿ ನಿಯಮ.ಆ ಹೃದಯಗಳು ಒಂದಾದರೇ ಮಾತ್ರ ಆ ಪ್ರೀತಿಯ ಆವಿಷ್ಕಾರ!

ಹಾಗೆ ಒಂದಾದ ನಮ್ಮ ಪ್ರೀತಿಯನ್ನು ನಮ್ಮ ಕೊನೆ ಉಸಿರು ಇರೋವವರೆಗೂ ಕಣ್ಣಲ್ಲಿ ಕಣ್ಣಟ್ಟು ಜೋಪಾನ ಮಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಅಲ್ವಾ ಚಿನ್ನೂ. ಅದಕ್ಕಾಗಿ ಕಂಡ ಎಲ್ಲ ದೇವರನ್ನು ಮನದುಂಬಿ ಪ್ರಾರ್ಥಿಸಿದ್ದೇನೆ ನಮ್ಮಿಬ್ಬರ ಈ ಬಂಧ ಅಳಿಯದೆ ಕೊನೆಯವರೆಗೂ ಉಳಿಯಲಿ ನಮ್ಮ ಬಾಳಿನಲ್ಲಿ ನಾವು ಹೆಜ್ಜೆ ಇಡುವ ಆ ದಾರಿಯಲ್ಲಿ ನಮ್ಮಿಬ್ಬರ ಹೆಜ್ಜೆಗಳು ಎಂದೂ ಏರುಪೇರಾಗದೇ ಸರಿಸಮಾನವಾಗಿ ಸಾಗುತ್ತಿರಬೇಕು ಎಂಬ ಆಸೆಯೊಂದಿಗೆ ನಿನ್ನ ಮುಂದೆ ನಿಲ್ಲಲು ಅಣಿಯಾಗಿದ್ದೇನೆ.

ಚಿನ್ನೂ! ಹೆಣ್ಣು ತಾನಾಗಿ ಹೂ ಮುಡಿದಾಗ ಬರುವ ಅಂದಕ್ಕಿಂತಲೂ ತನ್ನ ನಲ್ಲ ಮುಡಿಸಿದಾಗ ಆ ಸೌಂದರ್ಯ ಇಮ್ಮಡಿಸುತ್ತದೆ ಅಂತ ಕೇಳಿದ್ದೆ. ಹಾಗೆ ನೀ ಮುಡಿಸುವ ಮುಲ್ಲೆಯನ್ನು ಮುಡಿದು ಆ ಅಂದವನ್ನು ನಿನ್ನ ಕಂಗಳಲ್ಲಿ ನೋಡುವ ಆಸೆ ನನ್ನುದು. ಇಷ್ಟೆಲ್ಲಾ ಆಸೆ ಕನಸುಗಳೊಂದಿಗೆ ನಿನ್ನವಳಾಗಲು ಕಾದವಳು




ನಿನ್ನ ಬಂಗಾರಿ